ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರ (Karnataka Election) ರಾಜ್ಯದಲ್ಲಿ ಪರಿಶಿಷ್ಟ ಜಾತಿ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಅಭಿವೃದ್ಧಿ ಮಾಡಲು ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆ ಎಂದು ನಿವೃತ್ತ ಮುಖ್ಯ ಕಾರ್ಯದರ್ಶಿ ಹಾಗೂ ಬಿಜೆಪಿ ನಾಯಕಿ ಕೆ.
ರತ್ನಪ್ರಭಾ ಹೇಳಿದ್ದಾರೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ, ದಲಿತರ ಉದ್ಧಾರಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ, ಸಮಾಜ ಸುಧಾರಕ, ವಿಶ್ವ ಮಾನವತಾವಾದಿ ಬಾಬು ಜಗಜೀವನ್ರಾಂ ಕನಸಿನಂತೆ ಬಿಜೆಪಿ ಎಸ್ಸಿ ಜನಾಂಗದ ಸುಧಾರಣೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದೆ. ರಾಜ್ಯದ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಗೆ ಶೇ.15 ರಿಂದ ಶೇ.17 ಮೀಸಲಾತಿ ಹೆಚ್ಚಳ ಮಾಡಿ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಕೆ. ರತ್ನಪ್ರಭಾ ತಿಳಿಸಿದರು.
ಪರಿಶಿಷ್ಟ ಜಾತಿಗಳಿಗೆ ಈ ಹಿಂದೆ ನೀಡಲಾಗಿದ್ದ 15% ಮೀಸಲಾತಿಯಿಂದ ಕೆಲವೇ ಉಪಜಾತಿಗಳಿಗೆ ಲಾಭವಾಗುತ್ತಿತ್ತು. ಹೀಗಾಗಿ ಒಳಮೀಸಲಾತಿ ಜಾರಿಗೆ ಮಾಡಬೇಕೆಂದು 1990ರ ದಶಕದಿಂದ ಹೋರಾಟ ನಡೆಯುತ್ತಲೇ ಬಂದಿದೆ. ಇದರ ಪರಿಣಾಮವಾಗಿ 2005ರಲ್ಲಿ ಸದಾಶಿವ ಆಯೋಗ ರಚನೆಯಾಗಿ 2012ರಲ್ಲಿ ಆಯೋಗ ಒಳಮೀಸಲಾತಿ ಕುರಿತಂತೆ ತನ್ನ ವರದಿ ಸಲ್ಲಿಸಿತ್ತು. ಆದರೆ 2013-18ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಇದರ ಅನುಷ್ಠಾನ ಮಾಡಲಿಲ್ಲ. ದೀರ್ಘಕಾಲದ ಬೇಡಿಕೆಯಾಗಿದ್ದ ವರ್ಗೀಕರಣವನ್ನು ಜಾರಿಗೆ ತರಲು ಬಿಜೆಪಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಇದು ಸಮಾಜದ ದುರ್ಬಲ ವರ್ಗಗಳ ಉನ್ನತಿಗೆ ಬಿಜೆಪಿಯ ಬದ್ಧತೆಯನ್ನು ತೋರಿಸುತ್ತದೆ ಎಂದು ಕೆ. ರತ್ನಪ್ರಭಾ ಹೇಳಿದರು.